ವೈದ್ಯಶಾಸ್ತ್ರ

ಪ್ರಾಚೀನ ಕಾಲ

       ಕರ್ನಾಟಕದ ಉತ್ತರ ಭಾಗ ಅಶೋಕನ ರಾಜ್ಯದಲ್ಲಿದ್ದುದರಿಂದ ಆತ ಸ್ಥಾಪಿಸಿದ್ದ ಮನುಷ್ಯರ ಮತ್ತು ಪಶುಗಳ ಔಷಧಾಲಯಗಳು ಈ ಪ್ರದೇಶದಲ್ಲಿ ಇದ್ದಿರಬಹುದೆಂದು ಊಹಿಸಿ ಕರ್ನಾಟಕದ ವೈದ್ಯ ಇತಿಹಾಸವನ್ನು ಪ್ರ.ಶ.ಪೂ. ೨೬೦ ರಿಂದ ಪ್ರಾರಂಭಿಸಬಹುದು. ರಸಾಯನ ಮತ್ತು ಲೋಹಶಾಸ್ತ್ರಗಳ ಪಿತನೆಂಬ ಗೌರವಕ್ಕೆ ಪಾತ್ರನಾಗಿದ್ದ, ಸಾತವಾಹನರ ಕಾಲದ ಬೌದ್ಧಬಿಕ್ಷು ನಾಗಾರ್ಜುನ, ಶ್ರೀಶೈಲ ಪರ್ವತದಲ್ಲಿ ವಾಸವಾಗಿದ್ದು ರಸಾಯನ ಪ್ರಯೋಗಗಳಲ್ಲಿ ತೊಡಗಿದ್ದ. ರಸರತ್ನಾಕರ, ಲೋಹಶಾಸ್ತ್ರ ಮುಂತಾದ ವೈದ್ಯಗ್ರಂಥಗಳನ್ನು ಬರೆದ ಈತನನ್ನು ಕರ್ನಾಟಕದ ಪ್ರಥಮ ವೈದ್ಯವ್ಯಕ್ತಿ ಎನ್ನಬಹುದಾಗಿದೆ. 

      ಸಾತವಾಹನರ ಅನಂತರ ರಾಜ್ಯ ಕಟ್ಟಿದ ಗಂಗರು ಜೈನಧರ್ಮಾವಲಂಬಿಗಳಾಗಿದ್ದರು. ಗಂಗರಸ ದುರ್ವಿನೀತನ (೬೦೫-೬೫೦) ಗುರುವಾಗಿದ್ದ ದಿಗಂಬರ ಜೈನಯತಿ ಪುಜ್ಯಪಾದ ವೈದ್ಯಶಾಸ್ತ್ರದಲ್ಲಿಯೂ ಪಂಡಿತನಾಗಿದ್ದ. ಇವನು ಬರೆದ ಕಲ್ಯಾಣಕಾರಕ ಎಂಬ ಸಂಸ್ಕೃತ ವೈದ್ಯಗ್ರಂಥವನ್ನು ಮುಂದಿನ ಎಲ್ಲ ವಿದ್ವಾಂಸರೂ ಗೌರವದಿಂದ ಸ್ಮರಿಸಿದ್ದಾರೆ. ಈತನ ಸೋದರಳಿಯ ಸಿದ್ಧ ನಾಗಾರ್ಜುನ (೬೯೦) ರಸಾಯನ ಮತ್ತು ಲೋಹವಿದ್ಯೆಗಳಲ್ಲಿ ಖ್ಯಾತಿಯನ್ನು ಪಡೆದಿದ್ದ. ರಸೇಂದ್ರ ಮಂಗಳ, ಕಕ್ಷಪುಟತಂತ್ರ, ನಾಗಾರ್ಜುನತಂತ್ರ ಮುಂತಾದುವು ಈತನ ಕೃತಿಗಳು. 

    ಕರ್ನಾಟಕದ ದಕ್ಷಿಣಭಾಗದ ಬನ್ನೂರಿನಲ್ಲಿ ರಾಜ್ಯವಾಳುತ್ತಿದ್ದ ಗಂಗರಾಜ ಶ್ರೀಪುರುಷ(೭೭೫) ಗಜಶಾಸ್ತ್ರವನ್ನೂ ಆತನ ಮಗನಾದ ಸೈಗೊಟ್ಟ ಶಿವಮಾರ ಗಜಾಷ್ಟಕವನ್ನೂ ಬರೆದಿದ್ದಾರೆ (೮೦೦). ಶಿವಮಾರನ ಗಜಾಷ್ಟಕ ಕನ್ನಡಭಾಷೆಯ ಪ್ರಥಮಶಾಸ್ತ್ರಗ್ರಂಥ. 

    ರಾಷ್ಟ್ರಕೂಟ ರಾಜ ನೃಪತುಂಗನ (೮೧೫-೮೭೧) ಆಸ್ಥಾನದಲ್ಲಿದ್ದ ಉಗ್ರಾದಿತ್ಯನೆಂಬ ಜೈನ ವೈದ್ಯ ಎಂಬ ಗ್ರಂಥವನ್ನು ಬರೆದಿದ್ದಾನೆ. ಜೈನಧರ್ಮದ ನಿಷ್ಠೆಯನ್ನು ಪಾಲಿಸಿರುವ ಈ ಗ್ರಂಥದಲ್ಲಿ ಮದ್ಯ, ಮಾಂಸ ಮತ್ತು ಮಧುಗಳನ್ನು ಔಷಧಾರ್ಥವಾಗಿಯೂ ವರ್ಜಿಸಿರುವುದು ಒಂದು ವೈಶಿಷ್ಟ್ಯ. ಚಾಳುಕ್ಯರಾಜ ಇಮ್ಮಡಿ ಜಯಸಿಂಹನ (೧೦೧೫-೧೦೪೨) ಆಸ್ಥಾನದ ಬ್ರಾಹ್ಮಣ ಕವಿ ಚಾವುಂಡರಾಯ ತನ್ನ ಕನ್ನಡ ಗ್ರಂಥವಾದ ಲೋಕೋಪಕಾರದಲ್ಲಿ ಆಯುರ್ವೇದ ಶಾಸ್ತ್ರವನ್ನು ವಿಸ್ತಾರವಾಗಿ ವಿವರಿಸಿದ್ದಾನೆ.

      ಚಂದ್ರರಾಜನ (೧೦೭೯) ಮದನತಿಲಕ, ಕೀರ್ತಿವರ್ಮನ (೧೧೨೫) ಗೋವೈದ್ಯ, ಚಾಳುಕ್ಯ ಚಕ್ರವರ್ತಿ ಸೋಮೇಶ್ವರನ (೧೧೨೬-೩೮) ಮಾನಸೋಲ್ಲಾಸದಲ್ಲಿನ ಆಯುರ್ವೇದದ ವಿವರಣೆ ಮತ್ತು ಜೈನ ವೈದ್ಯ ಜಗದ್ದಳ ಸೋಮನಾಥನ (೧೧೫೦) ಕರ್ಣಾಟಕ ಕಲ್ಯಾಣಕಾರಕ, ದೇವೇಂದ್ರ ಮುನಿಯ (೧೨೦೦) ಬಾಲಗ್ರಹ ಚಿಕಿತ್ಸೆ, ಕೇಶವ ಪಂಡಿತನ (೧೨೪೦) ಸಿದ್ಧಮಂತ್ರ, ಬೋಪದೇವನ (೧೨೬೩) ಸಿದ್ಧ ಮಂತ್ರ ಪ್ರಕಾಶ, ವೈದ್ಯಶತಕ, ಹೃದಯ ದೀಪಿಕ ನಿಘಂಟು, ಯಾದವರಾಜ ಮಹಾದೇವನ ಮುಖ್ಯಮಂತ್ರಿಯಾಗಿದ್ದ ಹೇಮಾದ್ರಿಯ (೧೨೬೦-೧೩೦೯) ಆಯುರ್ವೇದ ರಸಾಯನವೆಂಬ ಅಷ್ಟಾಂಗ ಹೃದಯದ ಮೇಲಿನ ವ್ಯಾಖ್ಯಾನ, ಅಮೃತನಂದಿಯ ಅಕಾರಾದಿ ನಿಘಂಟು - ಇವು ಈ ಯುಗದ ಕೆಲವು ಮುಖ್ಯ ವೈದ್ಯಗ್ರಂಥಗಳು.

ಮಧ್ಯಕಾಲ
    
   ವಿಜಯನಗರದ ಅಧಿರಾಜನಾಗಿದ್ದ ಮುಗಳೀಪುರದ ಅರಸ ಮಂಗರಾಜ (೧೩೬೦) ವಿಷ ಚಿಕಿತ್ಸೆಯಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದ. ಈತನ ಖಗೇಂದ್ರ ಮಣಿದರ್ಪಣ ಕನ್ನಡ ಶಾಸ್ತ್ರ ಸಾಹಿತ್ಯದಲ್ಲಿ ಶ್ರೇಷ್ಠ ಗ್ರಂಥ. ಒಂದನೆಯ ಬುಕ್ಕರಾಯನ (೧೩೫೬-೭೬) ಆಸ್ಥಾನ ವೈದ್ಯ ವಿಷ್ಣುದೇವನ ರಸರಾಜಲಕ್ಷ್ಮಿ, ಇಮ್ಮಡಿ ಬುಕ್ಕರಾಯನ (೧೪೦೪-೨೪) ಆಸ್ಥಾನ ವೈದ್ಯ ಲಕ್ಷ್ಮಣಪಂಡಿತನ ವೈದ್ಯರಾಜ ವಲ್ಲಭ, ಅಭಿನವ ಚಂದ್ರನ (೧೪೦೦) ಅಶ್ವಶಾಸ್ತ್ರ, ವಲ್ಲಭೇಂದ್ರನ (೧೪೩೫) ವೈದ್ಯ ಚಿಂತಾಮಣಿ, ಕಲ್ಲರಸನ (೧೪೫೦) ಜನವಶ್ಯವೆಂಬ ಕಾಮಶಾಸ್ತ್ರ ಗ್ರಂಥ, ಕವಿಲಿಂಗನ (೧೪೯೦) ಕಾಮಶಾಸ್ತ್ರದ ಪದಗಳು, ದಾಮೋದರ ಪಂಡಿತನ ಆರೋಗ್ಯ ಚಿಂತಾಮಣಿ, ಭಟ್ಟನರಹರಿಯ ವಾಗ್ಭಟ ಮಂಡನ, ಶ್ರೀಧರ ದೇವನ (೧೫೦೦) ವೈದ್ಯಾಮೃತ, ಬಾಚರಸನ (೧೫೦೦) ಅಶ್ವವೈದ್ಯ, ಮೂರನೆಯ ಮಂಗರಸನ (೧೫೦೮) ಸೂಪಶಾಸ್ತ್ರ, ಸಾಳ್ವನ (೧೫೫೦) ವೈದ್ಯಸಾಂಗತ್ಯ, ರಘುನಾಥ ಸೂರಿಯ, ಭೋಜನ ಕುತೂಹಲ, ಯಳಂದೂರು ಚನ್ನರಾಜನ (೧೫೭೦) ವೈದ್ಯಸಾರ ಸಂಗ್ರಹ, ವೀರಭದ್ರರಾಜನ (೧೬೦೦) ಹಸ್ತಾಯುರ್ವೇದ ಟೀಕೆ, ರಾಮಚಂದ್ರ ಪಂಡಿತನ (೧೬೨೫) ಅಶ್ವಶಾಸ್ತ್ರ, ಪದ್ಮಣ ಪಂಡಿತನ (೧೬೨೭) ಹಯಸಾರ ಸಮುಚ್ಚಯ, ಬಿಜಾಪುರದ ಸುಲ್ತಾನ್ ಇಮ್ಮಡಿ ಆದಿಲ್ಷಹನ (೧೬೨೬-೫೬) ಆಸ್ಥಾನದಲ್ಲಿದ್ದ ಲೋಲಂಬರಾಜನ ಸದ್ವೈದ್ಯಜೀವನ ಮತ್ತು ವೈದ್ಯಾವತಂಸಗಳು, ಕೊಟ್ಟೂರು ಬಸವರಾಜನ (೧೬೭೦) ಶಿವತತ್ತ್ವರತ್ನಾಕರದಲ್ಲಿ ಆಯುರ್ವೇದದ ವಿವರಣೆ, ಶ್ರೀಕಂಠ ನಂದಿಯ ಪರ್ಯಾಯ ಮಂಜರಿ, ಶ್ರೀಕಂಠ ಪಂಡಿತನ ವೈದ್ಯಸಾರ ಸಂಗ್ರಹ, ಶ್ರೀಪಂಡಿತನ ಯೋಗಶತಕ, ಕೃಷ್ಣಾರ್ಯನ ಸಿದ್ಧಯೋಗ ಸಮುಚ್ಚಯ, ಸಲಾದು ಮಾಧವಾಚಾರ್ಯನ ಚಿಕಿತ್ಸಾಸಾರ ಸಂಗ್ರಹ, ಗಂಗಾಧರನ ಭೇಷಜ ಕಲ್ಪ, ಕಳಲೆಯ ವೀರರಾಜನ (೧೭೨೦) ಸಕಲ ವೈದ್ಯ ಸಂಹಿತಾ ಸಾರಾರ್ಣವ, ನಂಜರಾಜನ (೧೭೪೦) ವೈದ್ಯಸಾರಸಂಗ್ರಹ, ತಿಮ್ಮರಾಜ ಗೌಡನ (೧೭೫೦) ಸ್ತ್ರೀ ವೈದ್ಯ, ಇಮ್ಮಡಿ ಕೃಷ್ಣರಾಜ ಒಡೆಯನ (೧೭೫೯) ಬಾಹಟ ಟೀಕೆ, ಲಕ್ಷ್ಮಣಪಂಡಿತನ (೧೭೭೫) ಅಕಾರಾದಿ ನಿಘಂಟು- ಈ ಯುಗದ ಮುಖ್ಯ ವೈದ್ಯಗ್ರಂಥಗಳು.

 🍀🍀🍀🍀🍀
 ಸ್ಪರ್ಧ ಶ್ರೇಯಸ್ಸು ಹೊತ್ತಿಗೆಯಿಂದ
 ಬಸವರಾಜ ಟಿ.ಎಂ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕನ್ನಡ ಸಾಹಿತ್ಯ ಪದ್ಮಜ